ವಾಗ್ಭಟ
	ಪ್ರಾಚೀನ ಭಾರತದ ಸಾಹಿತ್ಯದಲ್ಲಿ ಅನೇಕ ವಾಗ್ಭಟರು ನಮಗೆ ಕಾಣಸಿಗುತ್ತಾರೆ. ಆದರೆ ಇಲ್ಲಿ ಅಷ್ಟಾಂಗ ಸಂಗ್ರಹ, ಅಷ್ಟಾಂಗ ಹೃದಯ ಮತ್ತು ರಸರತ್ನ ಸಮುಚ್ಛಯದ ಲೇಖಕರನ್ನು ಮಾತ್ರ ಪರಿಗಣಿಸಲಾಗಿದೆ. ಬಹುತೇಕ ಆಯುರ್ವೇದ ಶಾಸ್ತ್ರಜ್ಞರ ಪ್ರಕಾರ ಅಷ್ಟಾಂಗ ಸಂಗ್ರಹ ಮತ್ತು ಅಷ್ಟಾಂಗ ಹೃದಯ ಎರಡೂ ಒಬ್ಬರಿಂದಲೇ ರಚಿತವಾದುವು. ರಸರತ್ನಸಮುಚ್ಛಯದ ಲೇಖಕ ಬೇರೆ ಎಂದು ಅಭಿಪ್ರಾಯ ಪಡುತ್ತಾರೆ. ಅಷ್ಟಾಂಗ ಸಂಗ್ರಹದ ಲೇಖಕ ವಾಗ್ಭಟ ತನ್ನ ಬಗೆಗೆ ಬರೆಯುತ್ತ ತನ್ನ ತಾತನ ಹೆಸರು ವಾಗ್ಭಟ ಎಂಬುದಾಗಿ ತಿಳಿಸುತ್ತಾನೆ.

	ಕ್ರಿ.ಶ. 4ನೆಯ ಶತಮಾನದಲ್ಲಿ ಅಷ್ಟಾಂಗ ಸಂಗ್ರಹ ಮತ್ತು ಅಷ್ಟಾಂಗ ಹೃದಯ ಬರೆದ ವಾಗ್ಭಟ ಸಿಂಧು ದೇಶದ ಸಿಂಹಗುಪ್ತನ ಮಗ. ಬೌದ್ಧ ಮತಾವಲಂಬಿ, ಆತನ ಗುರು ಅವಲೋಕಿತ. ವಾಗ್ಭಟನ ಹೆಸರು ಮತ್ತು ಕೆಲಸ ಉತ್ತರ ಭಾರತ, ಸಿಂಧು ಪ್ರಾಂತಕ್ಕಿಂತಲೂ ದಕ್ಷಿಣಭಾರತದ ಕೇರಳದಲ್ಲಿ ಅಧಿಕವಾಗಿ ಕಾಣಸಿಗುತ್ತದೆ. ವಯಸ್ಸಾದ ನಂತರ ದಕ್ಷಿಣಭಾರತದ ಕೇರಳಕ್ಕೆ ಬಂದು ನೆಲೆಸಿ ಆಯುರ್ವೇದವನ್ನು ಚಿಕಿತ್ಸೆಯಲ್ಲಿ ತೊಡಗಿಸಿಕೊಂಡು ಇತರರಿಗೂ ಬೋಧಿಸುತ್ತಿದ್ದ. 'ಇಂದು ಮತ್ತು 'ಜೆಜ್ಜತರು ಈತನ ಶಿಷ್ಯರಲ್ಲಿ ಪ್ರಮುಖರು.

	ಕ್ರಿ.ಶ. ಒಂದು ಅಥವಾ 2ನೆಯ ಶತಮಾನದವರೆಗೆ ಕಾಯ, ಬಾಲ, ಗ್ರಹ, ಶಾಲಾತ್ಯ, ಶಲ್ಯ, ವಿಷ, ರಸಾಯನ ಮತ್ತು ವಾಜೇತರಣಗಳೆಂಬ ಆಯುರ್ವೇದದ ಎಂಟು ಭಾಗಗಳು ಶಾಸ್ತ್ರೀಯವಾಗಿ ಅಭ್ಯಸಿಸಲ್ಪಡುತ್ತಿದ್ದವು. ಅಲ್ಲಿಂದ ಮುಂದೆ 200 ವರ್ಷಗಳಲ್ಲಿ ದೇಶದ ರಾಜಕೀಯ ಮತ್ತು ಮತೀಯ ಗೊಂದಲಗಳಿಂದ ಶಾಸ್ತ್ರಾಭಿವೃದ್ದಿ ನಿಂತುಹೋಯಿತು. ಹೊಸ ಪುಸ್ತಕಗಳ ರಚನೆಯಿರಲಿ, ಹಳೆಯ ಪುಸ್ತಕಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ಇಂತಹ ಸ್ಥಿತಿಯಲ್ಲಿ ವಾಗ್ಭಟನಿಗೆ ನೋವುಂಟಾಗಿ ಆತನ ಕಾಲದಲ್ಲಿ ದೊರೆತಷ್ಟು ವಿಷಯಗಳನ್ನು ಸಂಗ್ರಹಿಸಿ ಚರಕ, ಸುಶ್ರೋತ, ನಿಮಿ ಮುಂತಾದ ಸಂಹಿತೆಗಳ ಆಧಾರದ ಮೇಲೆ ಅಷ್ಟಾಂಗ ಸಂಗ್ರಹ ರಚಿಸಿದ. ಆದರೆ ನಂತರ ಈ ಪುಸ್ತಕ ವಿದ್ಯಾರ್ಥಿಗಳಿಗೆ ಕಲಿಯಲು ಕಷ್ಟಕರವಾಗುತ್ತದೆಂದು ಅಷ್ಟಾಂಗ ಹೃದಯವನ್ನು ಸರಳ ಭಾಷೆಯಲ್ಲಿ ರಚಿಸಿದ. ಎರಡನೆಯ ಪುಸ್ತಕವೇ ಮೊದಲನೆಯದಕ್ಕಿಂದ ಹೆಚ್ಚು ಪ್ರಸಿದ್ಧವಾಯಿತು. ಸೂತ್ರಸ್ಥಾನದ ಮೊದಲ ಭಾಗ ಚರಕ ಮತ್ತು ಸುಶ್ರೋಶ ಸಂಹಿತೆಯಷ್ಟೇ ಶ್ರೇಷ್ಠವಾಗಿದೆ.

	ರಸರತ್ನಸಮುಚ್ಛಯದ ಗ್ರಂಥಕರ್ತ ವಾಗ್ಭಟನ ಹೆಸರುಳ್ಳ ಬೇರೊಬ್ಬನೆಂದು ಹೇಳುತ್ತಾರೆ. ಏಕೆಂದರೆ ಶೈಲಾ, ತತ್ವ ಬೇರೆ ಬೇರೆಯಾಗಿದೆ. ಕ್ರಿ.ಶ. 13ನೇ ಶತಮಾನದಲ್ಲಿದ್ದನೆಂದು ತಿಳಿದುಬರುತ್ತದೆ. ವ್ಯಾಕರಣ ಶುದ್ಧವಿಲ್ಲದ ಈ ಪುಸ್ತಕಗಳು ರಚಿಸಿದವರು ಅಷ್ಟಾಂಗ ಹೃದಯ, ಅಷ್ಟಾಂಗ ಸಂಗ್ರಹದ ರಚನಕಾರ ಅಲ್ಲವೆಂದು ಆಯುರ್ವೇದ ತಜ್ಞರ ಅಭಿಪ್ರಾಯ.
	(ಡಾ. ವಸುಂಧರಾ ಭೂಪತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ